ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Monday 18 July, 2011

ವಾಕ್ಪಥ ೫ ನೇ ಹೆಜ್ಜೆ - ಒಂದು ವರದಿ

ವಾಕ್ಪಥ- ಹೆಜ್ಜೆ ೫

ಬಾನುವಾರ ಬೆಳಗ್ಗೆಯೆ ಮೋಡ ಮುಸುಕಿದ ವಾತವರಣ ಆಗಾಗ ಸಣ್ಣಗೆ ಚುಮುಕಿಸುವ ಮಳೆ. ಏಳುವಾಗಲೆ ತಡ. ಕನಕಪುರದ ರಸ್ತೆಯಲ್ಲಿರುವ APS Engineer ಕಾಲೇಜ್ ವರೆಗು ಮಗಳ ಜೊತೆ ಗಾಡಿಯಲ್ಲಿ  ಹೋಗಿ ಕಾಲೇಜು ನೋಡಿ ಬರಬೇಕೆಂದು ನಿನ್ನೆ ರಾತ್ರಿ ನಿರ್ದರಿಸಿದ್ದ ಕಾರ್ಯಕ್ರಮ ಮಧ್ಯಾನದ ನಂತರ ಹೋಗುವದೆಂದು ಮುಂದಕ್ಕೆ ಹಾಕಿ ಬೇಗ ಸಿದ್ದನಾಗಿ 'ವಾಕ್ಪಥ-೫', ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯ 'ಸೃಷ್ಟಿ ವೆಂಚರ್ಸ್' ತಲುಪುವಾಗ ಸರಿಯಾಗಿ ೧೦ ಗಂಟೆ.
  ಎರಡನೆ ಮಹಡಿ ತಲುಪಿ ಒಳಗೆ ಹೋಗುವಾಗ ಆಗಲೆ ಎಲ್ಲರು ನೆರೆದಿದ್ದರು. ಸ್ನೇಹಿತರಾದ ಮಂಜು, ಗೋಪಿನಾಥರು, ರಘು, ಪ್ರಭು , ಆತ್ರೇಯ ಎಲ್ಲರಿಂದ ಅತ್ಮೀಯ ಬೆಚ್ಚನೆಯ ಸ್ವಾಗತ ಮನದಲ್ಲಿ ಮುದ ಮೂಡಿಸಿತ್ತು.ಕಾರ್ಯಕ್ರಮದ ವಿಶೇಷ ಬಾಷಣಕಾರ ಶ್ರೀ ರಘು ಹಾಲೂರ್ ಸಿದ್ದರಾಗಿ ಕುಳಿತ್ತಿದ್ದರು.ಹರೀಶರು ಸಮಯದ ದಂಡವನ್ನು ಹಿಡಿದು ಸಿದ್ದರಾದಂತೆ ಎಲ್ಲರು ಕಾರ್ಯಕ್ರಮದಲ್ಲಿ ಬಾಗವಹಿಸಲು ಸಜ್ಜಾದರು.
 ವಾಕ್ಪಥ-೫ ಗೋಷ್ಠಿಯ ನಿರ್ವಾಹಕರಾದ ಶ್ರೀಸುನೀಲ ದಾಸಪ್ಪನವರ ತಮ್ಮ ಆತ್ಮೀಯ ದ್ವನಿಯಲ್ಲಿ ಸ್ವಾಗತ ಕೋರುತ್ತ ಗೋಷ್ಠಿಯ ಪ್ರಸ್ಥುತತೆ ವಿವರಿಸುತ್ತ ಗೋಷ್ಠಿಗೆ ಚಾಲನೆ ನೀಡಿದರು.ಮೊದಲಿಗೆ ಮೂವರ ಬಾಷಣ ನಿಯಮಿತ ಅವದಿ ತಲಾ ಎಂಟು ನಿಮಿಷಗಳು.

ಮೊದಲನೆ ಭಾಷಣಕಾರರು ಶ್ರೀ ಕಿರಣ್ ಎಮ್ ಎಸ್. ತಮ್ಮ ಸ್ವಪರಿಚಯದೊಡನೆ ಆರಿಸಿಕೊಂಡ ವಿಷಯ ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆಗಳ ಬೆಳವಣಿಗೆಯ ಬಗ್ಗೆ. ಅವರು ಚಿಕ್ಕ ವಯಸ್ಸಿನಲ್ಲಿ ಚೆಂದಮಾಮ ಮುಂತಾದ ಶಿಶುಸಾಹಿತ್ಯವು ಹೇಗೆ ಮನಸ್ಸಿನಲ್ಲಿ ಕಥೆಗಳ ಕಲ್ಪನೆ ಹುಟ್ಟು ಹಾಕುವದೆಂದು ತಿಳಿಸುತ್ತ ನಂತರ ಅದೇ ಕಥಾಲೋಕಕ್ಕೆ ಸೆಳೆದೊಯ್ಯುವದೆಂದು ತಿಳಿಸಿದರು. ಅವರು   ಚಿತ್ತಾಲ ಮತ್ತು ತೇಜಸ್ವಿಯವರ ಕಾರಂತರ ಹೆಸರು ಪ್ರಸ್ತಾಪ ಮಾಡುತ್ತ,ಕನ್ನಡ ಸಾಹಿತ್ಯದಲ್ಲಿ ಕಥೆಗಳು ಹೇಗೆ ಬೇರುಗೊಂಡವು ಎಂದು ತಿಳಿಸಿದರು. ಈ ಮೂಲಕ ಕತೆಗಳ ಪಾತ್ರಗಳು ಸಂದರ್ಭಗಳು ಹೇಗೆ ರೂಪಗೊಳ್ಳುವ ಕ್ರಿಯೆ ನಡೆಯುವದೆಂದು ತಿಳಿಸಿದರು. ಅವರು ಮಾತನಾಡುವಾಗ ನನಗೆ ಅನ್ನಿಸಿದ್ದು ಸಣ್ಣ ಕಥೆಗಳ ಹುಟ್ಟುಬೆಳವಣಿಗೆಗಳಿಗೆ ರುವಾರಿಗಳಾದ ಮಾಸ್ತಿ,ಗೊರೂರು ಅವರ ಹೆಸರುಗಳನ್ನು ಹೇಳಬಹುದಿತ್ತು ಎಂದು. ಶ್ರೀಕಿರಣ್ ರವರ ಬಾಷಣ ಮೊಟ್ಟಮೊದಲಿಗೆ ವೇದಿಕೆ ಹತ್ತಿದವರಂತೆ ಇರದೆ ಸಾಕಷ್ಟು ಅಧಿಕಾರಯುತವಾಗಿತ್ತು ಅನ್ನಿಸಿತು. ಅಲ್ಲದೆ ಆರಿಸಿಕೊಂಡ ವಿಷಯವು ನನ್ನ ಮನಸಿಗೆ ಹತ್ತಿರವಾಗಿತ್ತು.

 ಎರಡನೆ ಬಾಷಣಕಾರರಾಗಿ ಶ್ರೀಗೋಪಾಲ್ ಕುಲಕರ್ಣಿಯವರು ತಾವು ಸಿದ್ದರಾಗಿ ಬಂದಿಲ್ಲವೆನ್ನುತ್ತ, ಜೀವನದಲ್ಲಿ ಹಾಸ್ಯದ ಬಗ್ಗೆ ಹೇಳುತ್ತೇನೆಂದು ತಿಳಿಸಿ, ತಮ್ಮ ತಂದೆಯವರು ಕಲಾಕಾರರಾಗಿದ್ದು ಶಿಲ್ಪಿಯೆಂದು, ಕನ್ನಡದ ಸಾಹಿತ್ಯದ ಬಗ್ಗೆ ಇರುವ ಆಸಕ್ತಿಯಿಂದಾಗಿ ಹಾಸ್ಯಲೇಖನಗಳ ಮೂಲಕ ತಾವು ಸೇವೆ ಸಲ್ಲಿಸುತ್ತಿದ್ದೇನೆಂದು ತಿಳಿಸಿದರು. ನಂತರ ಬಾಷಣ ಹಾಸ್ಯಕ್ಕೆ ಸಂಬಂಧಪಟ್ಟಿರುವದರಿಂದ ಒಂದೆರಡು 'ಜೋಕ್' ಹೇಳುವನೆಂದು ಎಲ್ಲರುನ್ನು ನಗಿಸಿ ತಮ್ಮ ಬಾಷಣ ಮುಗುಸಿದರು. ಆತುರವಾಗಿದ್ದ ಅವರು ತಮ್ಮಗೆ ಗೊತ್ತಾಗಿದ್ದ ಪೂರ್ಣ ಅವದಿಯನ್ನು ಬಳಸಿಕೊಳ್ಳದೆ ನಾಲಕ್ಕು ನಿಮಿಷಕ್ಕೆ ತಮ್ಮ ಮಾತನ್ನು ಮೊಟಕುಗೊಳಿಸಿದರು.

ಮೂರನೆ ಭಾಷಣಕಾರರು.. ಪ್ರಸಾದ್ ಚೇರ್ಕಾಡಿ ಮಾತನಾಡುವುದು ನಾವು ಕಲಿಯುವುದು ಹೇಗೆ ಎನ್ನುತ್ತ ಹಿರಿಯರಿಂದ ಗುರುಗಳಿಂದ ಮತ್ತು ಇತಿಹಾಸದಿಂದ ಎಂದು ಪ್ರಾರಂಬಿಸಿದರು.ಹಿರಿಯರು ಕಿರಿಯರ ಕಲಿಕೆ ದಾರಿಯಾಗಿ ಹೇಗೆ ತಮ್ಮ ಹೃದಯ ವೈಶಾಲ್ಯ ಮೆರೆಯುವರೆಂದು ತಿಳಿಸಿದರು. ನಂತರ ಅವರು ಸಾಮಾಜಿಕ ಮನಸ್ಥಿಥಿಯನ್ನು ವಿಷೇಶಣೆ ಮಾಡುತ್ತ , ಹಿರಿಯರು ತಾವು ಸಾದಿಸಲಾದದ್ದನು ತಮ್ಮ ಗೊಂದಲಗಳನ್ನು ಕಿರಿಯರ ಮೂಲಕ ಸಾದಿಸಿ ಪರಿಹಾರ ಹುಡುಕುವ ಪ್ರಯತ್ನನಡೆಸುವರೆಂದು ತಿಳಿಸಿದ್ದು ನಿಜಕ್ಕು ಜೀವನದ ಗೊಂದಲಗಳಿಗೊಂದು ಹೊಸ ನೋಟ. ಹಾಗೆಯೆ ಅವರು ಹೊಸ ವಿಷಯಗಳಿಗೆ ಅವಿಷ್ಕಾರಗಳಿಗೆ ಯುವಜನೆತೆ ತೆರೆದುಕೊಳ್ಳುತ್ತಿರುವ ಬಗ್ಗೆ ಮತ್ತು ಹಿರಿಯರು ಅದರಲ್ಲಿ ಅಷ್ಟೆ ಸಂಭ್ರಮದಲ್ಲಿ ಪಾಲ್ಗೊಳ್ಳೂತ್ತಿರುವ ಬಗ್ಗೆ ಬೆಳಕು ಚೆಲ್ಲಿದ್ದರು. ಬಾಷಣಕ್ಕೆ ಒಟ್ಟು ರೂಪದ ಕೊರತೆಯಿದ್ದರು ಅವರು ವಾಗ್ಝರಿ ನಿಜಕ್ಕು ಬಾಷಣವನ್ನು ಆಕರ್ಷಕವನ್ನಾಗಿಸಿತು.

ನಂತರ ಹರೀಶ್ ಆತ್ರೇಯರು ತಮ್ಮ  ಆಶುಭಾಷಣದ ಕಾರ್ಯಕ್ರಮ ನಿರೂಪಿಸಿದರು, ಆವರು ಕೊಟ್ಟಿದ್ದ ವಿಷಯ 'ಪತ್ರಿಕೋದ್ಯಮ ನೈಜ ಉದ್ದೇಶ ರ೦ಜನೆಯೇ ಅಥವಾ ಸತ್ಯದನಾವರಣವೇ?'. ತಮ್ಮ ಪ್ರಸ್ಥಾಪದಲ್ಲಿ ಅವರು ಪತ್ರಿಕೆಗಳು ನಿಜವಾದ ಸುದ್ದಿಯನ್ನು ಜನರಿಗೆ ತಲುಪಿಸುವ ತಮ್ಮ ಜವಾಬ್ದಾರಿಗಿಂತ ಅದನ್ನು ರಂಜನೀಯವೆನಿಸಿ , ತಮ್ಮ ಪತ್ರಿಕೆಯ ಪ್ರಸರಣ ಸಂಖ್ಯೆಯನ್ನು ಹೆಚ್ಚಿಸಲು ಮಾತ್ರ ಪ್ರಯತ್ನಪಡುತ್ತವೆ ಎನ್ನುತ್ತ  ಆಯ್ದ ಐವರನ್ನು ಕರೆದರು.  ಎರಡು ನಿಮಿಶ ಅವದಿ ವಿಷಯವನ್ನು ಪೂರ್ತಿ ಪ್ರಸ್ಥಾಪ ಮಾಡಲು ಕೆಲವರಿಗೆ ತೊಡಕ್ಕಾಗಿದ್ದು ಕಂಡು ಬಂದಿತು.

 ಪ್ರಜ್ವಲ್ ರವರು ಪಾಶ್ಚಾತ್ಯ ಮಾದರಿಯ ಅನುಕರಣೆಯಿಂದ ಪತ್ರಿಕೆಗಳು ತಮ್ಮ ಸ್ವಂತಿಕೆ ಕಳೆದು ಕೊಳ್ಳುತ್ತಿವೆ ಇದು ದೇಶದ ಹಿತಕ್ಕೆ ಮಾರಕ ಎಂದರೆ, ಪ್ರಭುರವರು ಕೇವಲ ಸರ್ಕ್ಯುಲೇಶನ್ ಗಾಗಿ ಪತ್ರಿಕೆಗಳನ್ನು ಪೇಜ್ ನ್ಯೂಸ್ ಪೇಪರ್ ಮಾಡುವ ಧೋರಣೆ ಅಸಹನೀಯ ಎಂದರು,ಗೋಪೀನಾಥರಾಯರು ಮಿಲಿಟರಿ ವಿಷಯವನ್ನು ಪತ್ರಿಕೋದ್ಯಮದಕ್ಕೆ ಸಮೀಕರಿಸಿದರೆ, ರಘು ಎಸ್ ಪಿ  ಪೈಡ್ ಜರ್ನಲಿಸ೦ ಇ೦ದ ಪತ್ರಿಕೆಗಳಿಗೆ ಹಾನಿ ಭಟ್ಟರ ಟೀ೦ ಪತ್ರಿಕೆಯನ್ನು ಬಿಟ್ಟ್ಟಿ ಮತ್ತೊ೦ದು ಪತ್ರಿಕೆಗೆ ಜ೦ಪ್ ಆಗಿದ್ದು ಪಕ್ಷಾ೦ತರದ೦ತೆ ಎಂದರೆ ಮ೦ಜುನಾಥ ನೈಜ ಕಾಳಜಿ ಇರುವ ಪತ್ರಿಕೆಗಳ ಸರ್ಕ್ಯುಲೇಷನ್ ಎ೦ದಿಗೂ ಕಮ್ಮಿ ರ೦ಜನೆಯ ಜೊತೆಗೆ ಅಲ್ಪ ವಿಷಯವನ್ನ ಹೇಳುವ ಪತ್ರಿಕೆಗಳು ಈಗ ಚಾಲ್ತಿಯಲ್ಲಿವೆ ಎಂದು ತಿಳಿಸಿದರು.

ನಂತರ ಬಾಷಣಗಳ ವಿಮರ್ಷೆ
ಮೊದಲ ವಿಮರ್ಷಕರಾಗಿ ಪ್ರಭುರವರು , ಕಿರಣರವರ ಬಾಷಣ ವಿಮರ್ಷಿಸುತ್ತ 'ಕಿರಣ್ ರವರ ಬಾಷಣದಲ್ಲಿ ವಿಷಯವಿದೆ ಆದರೆ ಅದನ್ನು ಹೇಳುವ ರೀತಿಯನ್ನು ಉತ್ತಮ್ಮ ಪಡಿಸಿಕೊಳ್ಳಬಹುದ್ದಿತ್ತು ಎಂದರು. ಅಲ್ಲದ ದ್ವನಿಯ ಏರಿಳಿತ ವನ್ನು ಗಮನದಲ್ಲಿಸಿದರೆ ಕಿರಣ್ ಅತ್ಯುತ್ತಮ ಬಾಷಣಕಾರರಾಗುತ್ತಾರೆ ಎಂದರು
ನಂತರ ಎರಡನೆ ವಿಮರ್ಷಕಾರನಾಗಿ, ಪಾರ್ಥಸಾರಥಿ ಎಂದರೆ ನಾನು ಗೋಪಾಲ್ ಕುಲಕರ್ಣಿಯವರ ಬಾಷಣದ ವಿಮರ್ಷೆಯ ಜವಾಬ್ದಾರಿ ಹೊತ್ತು, ಗೋಪಾಲ್ ರವರ ಬಾಷಣದ ಸಹಜತೆ ಮತ್ತು ಬಾಷೆಯ ಸೊಗಡು ಚೆನ್ನಾಗಿದ್ದು ಅವರು ಮೊದಲೆ ಸಿದ್ದರಾಗಿ ಬಂದು ಪೂರ್ಣ ಸಮಯದ ಪ್ರಯೋಜನ ಪಡೆದು ನಿದಾನವಾಗಿ ಮಾತನಾಡಿದ್ದರೆ ಚೆನ್ನಾಗಿತ್ತು ಎಂದು ತಿಳಿಸಿದೆ.
ನಂತರ ಮೂರನೆಯ ವಿಮರ್ಷಕರಾಗಿ ರಾಮಮೋಹನ ರವರು ಪ್ರಸಾದರ ಬಾಷಣವನ್ನು ಪ್ರಸ್ಥಾಪ ಮಾಡುತ್ತ ಅವರಿಗೆ ಉತ್ತಮ್ಮ ಬಾಷಣಕಾರರಾಗುವ ಎಲ್ಲ ಅವಕಾಶಗಳು ಇದೆ ಎಂದು ತಿಳಿಸಿದರು.

ಕಡೆಯ ಬಾಷಣವಾಗಿ ವಿಶೇಷ ಭಾಷಣಕಾರರು ರಘುನ೦ದನ್ ಹಾಲೂರ್ ಇವರಿಂದ
ದಿನ ಬಳಕೆಯಲ್ಲಿ ಕನ್ನಡದ ಬಗ್ಗೆ ಇ೦ಗ್ಲೀಷ್ ಮಧ್ಯೆ ಕನ್ನಡ ಬೆರೆಸಿ ಮಾತನಾಡುವ ಕನ್ನಡಿಗರ ಮನಸ್ಥಿತಿ ಬಗ್ಗೆ ವಿವರಿಸಿದರು. ಹಲವು ಸಹಜ ಅಪಹಾಸ್ಯ ಸಂದರ್ಭಗಳನ್ನು ನಿರೂಪಿಸಿದ ಅವರು, ಅನಗತ್ಯವಾಗಿ ಇಂಗ್ಲೀಷ್  ಪದ ಬಳಸುವ ಹಕೀಕತ್ತೇನು?  ಎಂದು ಪ್ರಶ್ನಿಸಿದರು.ಈ ಥರದ್ದು ಕನ್ನಡವಲ್ಲದ ಕನ್ನಡ ಎನ್ನುವ ಅವರ ಮಾತು ಮನಮುಟ್ಟುವಂತಿತ್ತು.ಅಲ್ಲದೆ ಅವರು ಈ ರೀತಿ ಅನಗತ್ಯವಾಗಿ ಕನ್ನಡವನ್ನು ತಿರಸ್ಕಾರ ಭಾವದಿಂದ ನೋಡುವ ಕನ್ನಡಿಗರನ್ನು ಅವಹೇಳನ ಮಾಡುವ ಅವಕಾಶ ಸಿಕ್ಕಲ್ಲಿ ನಾನು ಅದನ್ನು ಎಂದಿಗು ಬಿಡಲಾರೆ ಸದುಪಯೋಗ ಮಾಡಿಕೊಳ್ಳುವೆ ಎಂದರು. ಮತ್ತೆ ನಮ್ಮ ಈ ರೀತಿ ಕನ್ನಡ ಪ್ರೇಮ ಸಭೆಗೆ ಮಾತ್ರ ಸೀಮಿತಮಾಡಿಕೊಳ್ಳದೆ ನಿತ್ಯ ಜೀವದ ಬಳಕೆಯಲ್ಲು ತರಬೇಕೆಂದು, ಸಾದ್ಯವಾದಷ್ಟು ಅಂಗ್ಲ ಪದಗಳ ಉಪಯೋಗವನ್ನು ಕಡಿಮೆಗೊಳಿಸುತ್ತ ಹೋಗಬೇಕೆಂದು ತಿಳಿಸಿ ಅದೆ ರೀತಿ ಪ್ರತಿಜ್ಞೆ ಸ್ವೀಕರಿಸುತ್ತೇನೆ ಎಂದರು.

ರಘುನ೦ದನ್ ಹಾಲೂರ್ ಇವರ ಕಿರುಪರಿಚಯ:
  ರಘುನಂದನ ಹಾಲೂರ್ ಅವರು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ನಿಕಟಪೂರ್ವ (೨೦೧೦ ಸಮಿತಿ) ಅಧ್ಯಕ್ಷರಾಗಿದ್ದವರು. ಅತ್ತ್ಯುತ್ತಮ ನಾಯಕತ್ವದ ಗುಣಗಳನ್ನು ಸಹಜವಾಗಿ ಹೊಂದಿರುವ ಅವರು, ಸಹಮನಸ್ಕರನ್ನು ಒಗ್ಗೂಡಿಸಿ, ತಾವೂ ಪರಿಶ್ರಮವಹಿಸಿ ಸಹಚರರನ್ನೂ ಪ್ರೇರೇಪಿಸಿ ಅಮೇರಿಕಾದಲ್ಲಿ ಕನ್ನಡ ಸಮುದಾಯಕ್ಕೆ ಒಳ್ಳೆಯ ಹೆಸರು ತಂದವರು. ಅಲ್ಲದೆ ಟಿ.ವಿ.ಯಲ್ಲಿ ಪ್ರಸಾರವಾದ "ಸಾಗರದಾಚೆ ಸಪ್ತಸ್ವರ" ಎಂಬ ಕಾರ್ಯಕ್ರಮವನ್ನು ನಡೆಸಿಕೊಟ್ಟು ಅನೇಕರಿಗೆ ಕಿರುತೆರೆಯ ಮೂಲಕ ಪರಿಚಿತರಾಗಿರುವರು. ೨೦೦೭, ೨೦೦೮ರಲ್ಲಿ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ವಾರ್ಷಿಕಸಂಚಿಕೆ ಸ್ವರ್ಣಸೇತುವಿನ ಸಂಪಾದಕಸಮಿತಿಯಲ್ಲಿ ಸಾಹಿತ್ಯಿಕ ಸೇವೆಸಲ್ಲಿರುವರು.
ಇದೆಲ್ಲಕ್ಕಿಂತ ವಿಶೇಷವಾಗಿ ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲಿ ಕಳೆದ ಸುಮಾರು ಮೂರು ವರುಷಗಳಿಂದ ನಡೆದು ಬರುತ್ತಿರುವ ವಾಕ್ಪಟುಗಳು ತಂಡವನ್ನು ಕಲ್ಪಿಸಿ, ಸ್ಥಾಪಿಸಿ ಅದರ ಮೂಲಕ ಅನೇಕರಿಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಿರುವರು. ವಾಕ್ಪಥದ ಹಿತೈಶಿಗಳು.
ಇವರು ಅನೇಕ ಸ್ವಯಂ ಸೇವಾ ಸಂಸ್ಥೆಗಳಿಗೆ ಎಲ್ಲಾ ತರಹದ ಬೆಂಬಲ ನೀಡುತ್ತಾ ಈಗ ಬೆಂಗಳೂರಿನ ಅಂತಹ ಕೆಲವು ಸಂಸ್ಥೆಗಳಿಗೆ ಭೇಟಿಕೊಡಲು ಹಾಗೆ ತಮ್ಮ ತವರೂರಾದ ಚಿಕ್ಕಮಗಳೂರಿನಲ್ಲಿ ಕುಟುಂಬದವರೊಡನೆ ಇರಲು ಆಗಮಿಸಿದ್ದಾರೆ.

ನಂತರ ಹರೀಶ್ ರವರು ತಮ್ಮ ಸಮಯ ನಿರ್ವಹಣೆಯ ವಿವರಗಳನ್ನು ಸಭಿಕರಿಗೆ ತಿಳಿಸಿದರು. ಮಂಜುರವರು  ಸಭೆಯ ವ್ಯಾಕರಣಶುದ್ದಿಯ ಬಗ್ಗೆ ತಿಳಿಸುತ್ತ, ಎಲ್ಲರು ಕೆಲವು ಅಂಗ್ಲ ಪದಗಳನ್ನು ಉಪಯೋಗ ಮಾಡಿದರು ಅನ್ನುವದನ್ನು ಹೊರತುಪಡಿಸಿದರೆ, ಕನ್ನಡ ಮಾತನಾಡುವಾಗ ತಪ್ಪು ಮಾಡಲಿಲ್ಲವೆಂದು ತಿಳಿಸಿ ಎಲ್ಲರ ಬೆನ್ನು ತಟ್ಟಿದರು.

ಮುಂದಿನ ಗೋಷ್ಠಿಯ ರೂಪರೇಖೆಗಳ ಬಗ್ಗೆ ಚರ್ಚೆಯೊಂದಿಗೆ ಗೋಷ್ಠಿಯು ಮುಕ್ತಾಯಕ್ಕೆ ಬಂದಿತು.ಎಲ್ಲರು ಪರಸ್ಪರ ವಿದಾಯ ಹೇಳುತ್ತ ಮುಂದಿನ ಗೋಷ್ಥಿಯ ಬಗ್ಗೆ ಚಿಂತಿಸುತ್ತ ಹೊರಗೆ ಬಂದರೆ ಯಥಾಪ್ರಕಾರ ಮೋಡ ತುಂಬಿದ ವಾತವರಣ.

2 comments:

  1. ಸುಂದರ ವರದಿ, ಪಾರ್ಥ ರವರೇ ನೀವು ಹೋದ ಮೇಲೆ, ಅನೋಪಚಾರಿಕವಾಗಿ ಬಹಳಷ್ಟು ವಿಷಯಗಳು ಚರ್ಚೆಯಾದವು, ಪ್ರಭು ಮೂರ್ತಿ ಯವರು, ಮುಂದಿನ ಯೋಜನೆಗಳ ಬಗ್ಗೆ ಬರೆಯಬಹುದೆಂದು ಆಶಿಸಿದ್ದೀನಿ.

    ReplyDelete
  2. ವಂದನೆಗಳು ರಘುರವರೆ
    ಮುಂದಿನ ವಾಕ್ಪತದಲ್ಲಿ ಸಿಗುತ್ತೇನಲ್ಲ ಆಗ ಎಲ್ಲ ತಿಳಿಯುತ್ತದೆ
    ನೀವು ಒಮ್ಮೆ ಜಾನಪದದ ಬಗ್ಗೆ ಒಂದು ವಿಶೇಷ ಬಾಷಣ ಮಾಡಿ
    ಆಸಕ್ತಿದಾಯಕವಾಗಿರುತ್ತೆ

    ReplyDelete